ಭಾನುವಾರ, ಆಗಸ್ಟ್ 21, 2016

ಕಂದನ ಕೂಗು

ಧರಣಿಮಂಡಲ ಮಧ್ಯದೊಳಗೆ 
ಮೆರೆಯುತಿಹ ಕರ್ನಾಟ ರಾಜ್ಯದೊಳಿರುವ
ಕಂದಮ್ಮನೆoಬ ಅಮ್ಮನ ಕಥೆಯನಿಂತು ಕೇಳಿರಿ
ಕಡಿಮೆಯಿರುವ ಸಮಯದೊಳಗೆ
ವಾಚನೋಡುತ ಕಂದನಮ್ಮನು
ಬಳಸಿ ನಿಂತ ಕಂದನನ್ನು
ತಬ್ಬಿ ಹಿಡಿದಳು ಹರುಷದಿ
ಶಾಲೆಯಲ್ಲಿ ಓದಬೇಕು
ಕೊಟ್ಟ ಡಬ್ಬಿಯ ತಿನ್ನಬೇಕು
ಆಟವನ್ನು ಆಡಬೇಕು
ಎಂದು ಅಮ್ಮನು ಹೇಳಲು
ಅಮ್ಮ ಹೇಳಿದ ಮಾತು ಕೇಳಿ
ಎಲ್ಲದಕ್ಕೂ ನಗೆಯನಿತ್ತು
ಬಿಗಿದು ಅಪ್ಪಿ ಕೊರಳ ಹಿಡಿಯಲು
ಅಲ್ಲೆ ತುಂಬಿತು ಕಂಠವು
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
ಇಂದೆಮಗೆ ಪ್ರಾಜೆಕ್ಟು ಸಿಕ್ಕಿತು
ಇದನು ಬೇಗನೆ ಮುಗಿಸಬೇಕು
ಸಂಧಿಗ್ಧವ ಅರಿತುಕೊಳ್ಳಿ
ಎಂದನಾಫೀಸ್ ರಾಯನು
ಒಂದು ಭಿನ್ನಹ ರಾಯ ಕೇಳು
ಕಂದನಿರುವನು ಶಾಲೆಯೊಳಗೆ
ಒಂದು ನಿಮಿಷದಿ ಕರೆದು ಕೊಂಡು
ಬಂದು ಸೇರುವೆ ಇಲ್ಲಿಗೆ
ಬಿಡಲು ಒಲ್ಲೆ ಎಂಬ ಅವಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ಕರೆದು ಒಯ್ಯಲು
ನಾನು ಬಂದೆನು ಇಲ್ಲಿಗೆ
ದಿನವು ಇದುವು ಸಾಧ್ಯವಿಲ್ಲ
ಅವರು ನನ್ನ ಬಿಡುವುದಿಲ್ಲ
ನಾಳೆಯಿಂದ ಪ್ಲೇ ಹೋಮ್ಗೆ
ಹೋಗು ಎಂದಳು ಅಮ್ಮನು
ಆರ ಜೊತೆಯಲಿ ಆಡಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಒಟ್ಟಿಗೆ ಓದಲಮ್ಮ
ಆರು ಮo ಮo ಕೊಡುವರು
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
ಆಯಗಳಿರಾ ಮಿಸ್ಸುಗಳಿರಾ
ನಮ್ಮ ತಾಯೊಡುಹುಟ್ಟುಗಳಿರ
ನಿಮ್ಮ ಕಂದ ಎಂದು ಕಾಣಿರಿ
ನನ್ನ ಈ ಮಗುವನು
ಹಠವ ಹಿಡಿದರೆ ಹೊಡೆಯಬೇಡಿ
ತಪ್ಪುಗೈದರೆ ಗದರಬೇಡಿ
ಕಂದ ನಿಮ್ಮವನೆಂದು ಕಾಣಿರಿ
ನನ್ನ ಈ ಮಗುವನು
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
ಮಗುವ ಪ್ಲೇ ಹೋಮ್ಗೆ ಕಳಿಸಿ
ಸಾವಕಾಶವ ಮಾಡದಂತೆ
ಆಫೀಸಿನ ಸೀಟು ಸೇರಿ
ಸಿಟ್ಟಲೀ ಇವಳೆಂದಳು
ನೆನ್ನೆ ಕೆಲಸವು ಮುಗಿದಿದಿದೆ ಕೋ
ನಾಳೆ ಕೆಲಸವು ಮುಗಿದಿದಿದೆ ಕೋ
ಓ ರಾಯನೆ ನೀನಿದೆಲ್ಲವ
ನೋಡಿ ಸಂತಸದಿoದಿರು
ನೊಂದ ತಾಯಿಯ ಮಾತು ಕೇಳಿ
ಮುಖದಮೇಲೆ ನಗೆಯ ತಂದು
ನನ್ಮನೆದೂ ಇದುವೆ ಗೋಳೆಂದು
ಮುಂದೆ ನಡೆದನು ಕೆಲಸಕೆ
ಕೆಲಸವು ಅನಿವಾರ್ಯವೆಂಬ ಬೆಂಗ್ಳುರಮ್ಮನ ಕಥೆಯಿದು
-ಹರೀಶ್

ಸೋಮವಾರ, ಜನವರಿ 18, 2016

ಶಾ(ಸಾ)ಲೆ

ವಯಸ್ಸಾಗಿ ಸುಕ್ಕುಗಟ್ಟಿದ ಮುಖ, ಇರುವ ಬಿಳಿ ಕೂದಲನ್ನ ಚೆನ್ನಾಗಿ ಕೊಬ್ಬರಿ ಎಣ್ಣೆ ಹಾಕಿ ಹಿಂದಕ್ಕೆ ಬಾಚಿದ ಕೂದಲು, ಕಾಖಿ ಅಂಗಿ ಕಾಖಿ ಪ್ಯಾಂಟು ಹಾಕಿ, ಹೆಗಲ ಮೇಲೆ ಒಂದು ಟವೆಲ್ ಹೊದ್ದ ಕುಳ್ಳು ದೇಹದ ರಂಗಪ್ಪನ ಮುಖದಲ್ಲಿ ಆಶ್ಚರ್ಯ!

ಓಹ್ ರಾಮಪ್ಪಾ, ಹೆಂಗಿದೀಯ, ಸಂದಾಗಿದೀಯ. ಏನ್ ಬಾಂಬೆಗೆ ಹೊದೊನ್ ಈಗ್ಲ ಕಾಣೋದು, ಏಟು ದಿನ ಆಯ್ತು.
ಹೂ ರಂಗಪ್ಪ ಚನಗಿದಿನಿ, ಏನ್ ಕೆಲಸ ಜೋರ. ಎಲ್ಲಾ ನಿಂದೆ ಉಸ್ತುವಾರಿನ ಈಗಲೂ ಶಾಲೆಲಿ.
ಏನ್ ಸಾಲೇನೋ ಏನೋ ದಣಿ, ನೀವ್ಗುಳು ಇದ್ದಾಗ ಇದ್ದಂಗಿಲ್ಲ, ಇಸ್ಕೂಲಿಗೆ  ಹುಡ್ಗುರೆ ಬರಕ್ಕಿಲ್ಲ ಅಂತವೇ.
ಆ ಪ್ರೈವೇಟ್ ಮುಂಡೆಮಕ್ಳು ಸುರು ಮಾಡಿದ್ಮೇಲೆ, ಈಕಡೆ ಹರ್ವು ಕಮ್ಮಿನೆ.

ಹಿಂದೆ ಎಸ್ಟ್ ಸಂದಾಗಿತ್ತು, ಸಾಲೆ ತುಂಬಾ ಮಕ್ಳು, ಒಂದ್ನೇಕಿಲಾಸಿಂದ ಏಳ್ನೆ ಕಿಲಾಸ್ತನ ಹೈಕ್ಳೋ ಹೈಕ್ಳು, ಒಲ ಊಳೋ ಮಾದನ ಮಕ್ಳು ಇದೆ ಇಸ್ಕೂಲು, ಡಿಸಿ ಆಪಿಸರ್ ಮಕ್ಳು ಇದೆ ಇಸ್ಕೂಲು.
ನೀವ್ ಕಂಡಂಗೆ ಆ ಡಾಕುಟ್ರು ಸೇಸಾದ್ರಪ್ನೋರ ಮಕ್ಳು ಇಲ್ಲೇ ಅಲ್ವೇ ಬತ್ತಿದ್ದು. ಇಲ್ ಅಲ್ದೆ ಇನ್ನೆಲ್ ಹೋಗ್ತವೆ. ದೊಡ್ ದೊಡ್ ಆಪೀಸರ್ ಮಕ್ಳಿಗ್ ತಾಕೀತ್ ಮಾಡಿವ್ನಿ ನಾನು, ಅಂತ ಮೀಸೆ ಮೇಲೆ ಕೈ ಹಾಕಿದ.

ಹೂ  ಹೌದು. ಇದೊಂದೇ ಅಲ್ವೇ ಇದ್ದದ್ದು, ಬಹಳ ಕಳಕಳಿಯಿಂದ  ಕಲಿಸುತ್ತಿದ  ಕನ್ನಡದ ಸೀತಾರಾಮಯ್ಯ ಮೇಷ್ಟ್ರು, ಲೆಕ್ಕದಲ್ಲಿ ಲಾಯಕ್ಕಿದ್ದ ಉಮೇಶಪ್ಪ, ಇತಿಹಾಸವನ್ನು ಹೇಳಕ್ಕೆ ಬರದಿದ್ದರೂ ಪರೀಕ್ಷೆಲಿ ಅಂಕ ಬರುವಷ್ಟು ಕತೆ ಹೇಳುತ್ತಿದ್ದ ಪುಷ್ಪ ಟೀಚರ್.
ಮಕ್ಕಳನ್ನ ಮುಖ್ಯಮಂತ್ರಿ ಮಾಡೂದೆನು, ಸಫಾಯಿ, ವೇಳಾ, ಉಸ್ತುವಾರಿ, ನೀರಾವರಿ. ಅಬ್ಬಾ ಎಷ್ಟು ಮಂತ್ರಿಗಳು. ಹ ಹ. ಹಾಗೇ ನೆನಪಿನ ಹರಿವು ಬಂದಂಗೆ ಪಟ ಪಟನೆ ಹೇಳಿದ.

ಈಗ್ಲೂ ಅದೆ, ನೆಟ್ಟಗೆ  ಐವತ್ತು ಮಕ್ಳಿಲ್ಲ, ಓದಿದ್ರೆಷ್ಟು ಬುಟ್ರೆಷ್ಟು, ಮನೇಲಿ ಕಿತಾಪತಿ ಮಾಡ್ತವೆ ಮುಂಡೇವು ಅಂತ ಇಲ್ಲಿ ತಕ್ಕಬಂದ್ ಬುಟ್ಟವ್ರೆ ಅನ್ನೋತರ ಐತೆ. ಅದ್ರುಮೇಲೆ ಈ ಮೆಟ್ರಿಗೂ ಆಸ್ತೆ ಅಷ್ಟುಕ್ಕಷ್ಟೇ,
ಹಿಂದ್ಲಂಗೆಲ್ಲಾ ಕಲ್ಸುದಿಲ್ಲ, ಮಕ್ಳು ಮುಕ್ಳಿಮೇಲೆ ಬಿಟ್ಟು ತಿದ್ದಂಗಿಲ್ಲ. ಅಲ್ಲದಣಿ, ತ್ಯಪ್ ಮಾಡಿದ್ರೆ ಓಕ್ಕಳ್ಳಿ ಅಂತ ಬುದ್ಬೇಕಂತೆ, ಕುಣಕoತ ಪಾಠವ ಹೇಳ್ಬೇಕಂತೆ.
ಮಕ್ಳು ತ್ಯಪ್ ಮಾಡ್ದಾಗ ನಾಕ್ ಬಿಡ ಬದ್ಲು, ಫಿಲಂನವರ ತರ ಡ್ಯಾನ್ಸ್ ಮಾಡಿದ್ರೆ, ಆ ಮುಂಡೆ ಮಕ್ಳಿಗ್ ಇದ್ಯೆ ತಲಿಗ್ ಓಗದಾದ್ರು ಎಂಗೆ ಅಂತೀನಿ.
ಅದ್ರುಮೇಲೆ ಊಟ ಕೊಡೊ ಕಾನೂನ್ ಬೇರೆ ಬಂದದೆ ಈಗ, ಮುಂಡೇವ್ಕೆ ಇದ್ಯೆಗಿಂತ ನೈವೇದ್ಯೇ ಮೇಲೇ ಕಣ್ಣು, ಏನ್ ರಂಗಣ್ಣ ಸಾಂತವ್ವ ತಿನ್ನಕ್ ಏನ್ ಮಾಡವ್ಳೆ ಇವತ್ತು ಅಂತವೆ ತ್ಯಪ್ರು ಮುಂಡೇವು.
ಆಕಡೆ ಚಿತ್ರನ್ನ ಘಮ್ಗುಟ್ಟoಗಿಲ್ಲ, ಇತ್ಲಗಲೇ ಪಾಠ ಗೀಟ ಎಲ್ಲಾ ಓದಂಗೆಯ. ಈತರ ಇದ್ಯೆಯ ಕಲುತ್ರೆ, ಬೆಳ್ದಿoಗ್ಳಿಗೆ ಆವಿಯಾಯ್ತದೆ ಇದ್ಯೆ.
ಹಿಂದೆಲ್ಲ ಮ್ಯಾಡoಗಳು, ರಂಗಪ್ಪ, ಆ ನಾಟಕ್ವ ಮಾಡ್ಸೋಣು, ಹೆಣ್ ಮಕ್ಳಿಗೆ ಹಾಡು ರಂಗೋಲಿ ಹೇಳ್ ಕೊಡೋಣು, ಅದಕ್ಕೇ ಆ ಪುಸ್ತಕ್ವಾ ತಕ್ಕೊಂಬಾ, ಬಣ್ಣದ ಕೋಲ್ ತಕ್ಕೊಂಬಾ, ಒಸಿ ಮುಂಚೆ ಬಂದು ಕಿಲೀನು ಮಾಡು ಅಂತಿದ್ರೆ,
ಇವು, ಏನ್ ಊಟಕ್ ಇವತ್ತು, ಏನ್ ಮಾಡವ್ಳೆ ಸಾಂತವ್ವ, ಇವತ್ತು ಕೀರ್ ಮಾಡಕ್ ಹೇಳು, ಉಳ್ಲಾಗಡ್ಡಿ ಕಾಲಿಯಾಗದೆ ಜೊತೆಗೆ ಬೆಲ್ವಾ ತಕ್ಕೊಂಬಾ. ಬಡಕಬೇಕು ಇವ್ರ್ ಸಿಕ್ಸಣಕ್ಕೆ. ಪಾಟ್ವಾ ಕಲ್ಸೋ ಮುಸುಡಿಯ ಅದು, ಬಾಯ್ ಬಿಟ್ರೆ ಬಂಡಗೇಡು.  

ಈ ಕತೆಲಿ ಬರ್ಬರ್ತಾ ಬರ್ಬರ್ತಾ, ಎಲ್ಲ ಮುಗಿತದೆ. ಸಾಲೆಯ ಮುಚ್ತಾರೆ, ಅಲ್ಲಿಗ್ ನಾನು ನನ್ನ ಸರ್ವಿಸ್ ಮುಗುಸ್ತಿನಿ, ಇನ್ನೊಂದ್ ಮೂರ್ ಉಗಾದಿ ಕಳದ್ರೆ ನಾನು ಮನೆಯ ಸೇರ್ಕೊಳದೆ.  
ಗೊರ್ಮೆಂಟ್ಗೆ ಸರ್ಕಾರ್ವ ನಡ್ಸುಕ್ ಆಗುಕ್ಕಿಲ್ಲ, ಇನ್ ಸಾಲಿನ.. ಕಣಸು..

ಚಿಕ್ ವಯಸಿನ್ ಇದ್ಯೇನ ಒಬ್ರಿಗ್ ಒಂದು, ಇನ್ನೊಬ್ರಿಗ್ ಒಂದು ಕೊಟ್ರೆ ಸಮಾಜ ಉಳಿತದಾ ದಣಿ, ಏರು ಪೇರು ಉಟ್ಟಿ ಸಾಯ್ತವೆ ಪಾಪ. ಈ ಪ್ರೈವೇಟ್ ನನ್ ಮಕ್ಳಿಂದ ಆಗ್ತಿರೋದ್ ಇದೆಯಾ...

-ಹರೀಶ್

ಶುಕ್ರವಾರ, ಜುಲೈ 17, 2015

ಸಾಫ್ಟ್ವೇರ್ ಉದ್ಯೋಗ -


ಎಲ್ಲರೂ ಬಯ್ಯಲು ನಾಲಿಗೆ ತುದಿಯಲ್ಲಿರುವ, ವಿಡಂಬನೆಗೆ ಸಹಕರಿಸುವ, ಎಲ್ಲ ತಂದೆ ತಾಯಿಯರೂ ತಮ್ಮ ಮಕ್ಕಳು ಅದಾಗಬೇಕೂ ಅಂತ ಬಯಸುವ, ಅದಾಗಿಸಿದ ಮೇಲೆ, ಅಯ್ಯೋ ಅವನು ನಮ್ಮ ಬಳಿ ಇರೋಲ್ಲ ಅಂತ ಗೋಳಾಡಿಸುವ ಉದ್ಯೋಗ. ಒಂದುತರ ಬೆಂಗಳೂರಿನ ಪರಿಸ್ಥಿತಿ ಈ ಉದ್ಯೋಗಿಗಳಿಗೆ. ಎಲ್ಲರಿಗೂ ಬೇಕು ಹಾಗೆ ಎಲ್ಲರಿಗೂ ಬೇಡ.

ಅದು ಯಾರ ಬಲವಂತವೂ ಇಲ್ಲದೆ, ಮುಂದೆ ಮಾಡುವ ಕೆಲಸದ ಪರಿವೂ ಇಲ್ಲದೆ ಶುಬ್ರ ಅನ್ನುವುದಕ್ಕಿಂತ ಖಾಲಿ ಮನಸ್ಸಿನಲ್ಲಿ ಇಂಜಿನಿಯರ್ ಕಾಲೇಜಿಗೆ ಸೇರಿದ ನಮ್ಮಂತ ಮನಸ್ಸುಗಳೇ ಬಹುತೇಕ. ಅದು ಏನು ಕಲಿಸಿದರೋ, ಅದು ಏನು ಕಲಿತೆವೋ. ಒಟ್ಟಿನಲ್ಲಿ ಒಂದು ಬೀಜವನ್ನು ಕುಂಡದಲ್ಲಿಟ್ಟು ಸಸಿ ಮಾಡಿ ಬದುಕಿಕೋ ಅಂತ ಬಯಲಿಗೆ ಬಿಟ್ಟರು.

ಬಯಲಿನ ಪರಿಸ್ಥಿತಿಗೆ ಹೊಂದಲಾರದೆ ಹಪತಪಿಸುತ್ತಿದ್ದ ಸಮಯದಲ್ಲಿ, ಆ ಸಸಿಯನ್ನು ಬೆಳೆಸಿ ಪೋಷಿಸಿ, ಫಲವನ್ನು ಪಡೆಯುತ್ತಿರುವುದು ಈ ಕ್ಷೇತ್ರಗಳು.
ಬೆಳೆದು ದೊಡ್ಡದಾದ ಮೇಲೆ, ನನ್ನ ಪ್ರಯತ್ನದಿಂದ ನಾನು ದೊಡ್ದದಾದೆ, ನೀ ಕೊಡುತ್ತಿರುವ ಆಹಾರ ನಾ ಕೊಡುತ್ತಿರುವ ಫಲಕ್ಕೆ ಸರಿ ಇಲ್ಲ. ಇದೇ ಫಲ ಅಲ್ಲಿ ಕೊಟ್ಟರೆ ಅಂತ ಯೋಚನೆ.

ಜ್ಞಾನದ ಆಳಕ್ಕೆ ಇಳಿಯಲು ಸಮಯದ ಅಭಾವವೋ, ಆಸಕ್ತಿಯ ಕೊರತೆಯೋ ಅಥವಾ ಅವಶ್ಯಕತೆ ಇಲ್ಲ ಎಂಬ ಭಾವವೋ, ಒಟ್ಟಿನಲ್ಲಿ, ಬಟ್ಟಲಿನಲ್ಲಿ ನೀರನ್ನು ತುಂಬಿಕೊಂಡು ಸಮುದ್ರದಂತೆ  ಬೀಗುತ್ತಾ, ಅವಶ್ಯಕತೆ ಬಿದ್ದಾಗ ಬಟ್ಟಲಿನ ನೀರು ಸಾಕಾಗದೆ, ತೊಳಲಾಡಿ, ಸರಸ್ವತಿಯಿಂದ ಲಕ್ಷ್ಮಿ ಅನ್ನೋದನ್ನು ಮರೆತು, ಲಕ್ಷ್ಮಿಗಾಗಿ ಸರಸ್ವತಿ ಅನ್ನೋ ಮನಸ್ಥಿತಿ ತಲುಪಿ, ಮತ್ತೆ, ಇದ್ದ ಬಟ್ಟಲಿನ ನೀರನ್ನೇ ಸೋಸಿ ತಯಾರು ಮಾಡಿಕೊಂಡು ಬೇರೆ ಜಾಗಕ್ಕೆ ಗುಪ್ತಗಾಮಿನಿಯoತೆ ಪ್ರವಹಿಸಿ ಬಿಡುವುದು. ಅಲ್ಲಿ ಮತ್ತದೇ ಆರ್ಭಟ.


ತಾವು ಮಾಡುತ್ತಿರುವ ಉದ್ಯೋಗವೊಂದನ್ನು ಬಿಟ್ಟು ಬೇರೆಲ್ಲಾ ಕೆಲಸಗಳು ಚೆನ್ನಾಗಿದೆ, ಏನೋ ಯಾವುದೋ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈ ಉದ್ಯೋಗ ಅನ್ನೋ ಭಾವವವನ್ನು ತೋರುತ್ತಾ, ನೆಮ್ಮದಿ ಕೆಳದುಕೊಂಡು, ಸಮೋಸ ಮಾರಿದ್ರೆ ಇದಕ್ಕಿಂತ ಜಾಸ್ತಿ ಬರ್ತಿತ್ತು, ಪಾನಿ ಪೂರಿಯೋನು ನಮಗಿಂತ ಜಾಸ್ತಿ ದುಡಿತಾನೆ ಅಂತ ಹಣದ ಲೆಕ್ಕದಲ್ಲಿ ತಮ್ಮನ್ನು ತಾವು ತೂಗಿಸಿಕೊಳ್ಳುತ್ತಾ ತಮ್ಮ ಜ್ಞಾನದ ದೇಹವನ್ನು ಬೆತ್ತಲಾಗಿಸಿ, ಗಂಟೆಗೊಂದು ಸಲ ಕಾಫಿ ಚಹಾ ಕುಡಿಯುವುದು,ಸಿಗರೇಟು ಸೇದುವುದು.
ಚಹಾ ಅಂಗಡಿಯವನು, ಪಾಪ! ಕೆಲಸ ಮಾಡಿ ಮಾಡಿ ತಲೆ ಕೆಟ್ಟಿರತ್ತೆ ಅಂತ ಅವಾ ಲೋಚಗುಟ್ತಾನೆ. ಆದ್ರೆ, ಹೋಗ್ತಾ ದುಡ್ಡು ಕೊಡುವಾಗ, ಎಸ್ಟ್ ದುಡಿತೀಯ ದಿನಕ್ಕೆ ಅಂತ ಕೇಳಿ ಇವ ಮುಂದಿನ ಚಹಾಕೆ ತಯಾರಿ ತಗೋತಾನೆ.

ಈ ಕೆಲಸ, ಬಿಡಿಸಿ ತಿನ್ನಬೇಕಾದ ಹಣ್ಣಿನoತೆ ಕಂಡರೆ, ಬೇರೆಲ್ಲಾ, ಬಿಡಿಸಿ ತಿನ್ನಲು ತಯಾರಾದ ಹಣ್ಣುಗಳoತೆ ಕಾಣುತ್ತವೆ.        

ಹಾಗೇ ಜಲಪಾತ ಕಾದoಬರಿಯಲ್ಲಿ ಓದಿದ್ದ ನೆನಪು, ಪ್ರಸವದ ನೋವು, ಸಹಜವಾಗಿ ಹೆರುವ ಎಲ್ಲ ಹೆಣ್ಣಿಗೂ ಒಂದೇ. ಅದನ್ನು ಮುಂದೆಬರುವ ಮಗುವಿಗಾಗಿ ಅವಡುಗಚ್ಚಿ ಅನುಭವಿಸುತ್ತಾಳೆ, ನೋವು ಬರದಿದ್ದಲ್ಲಿ ಹೆದರಿ ನೋವು ಬರಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುತ್ತಾಳೆ ಅಂತ.            
         
-ಹರೀಶ್

ಶನಿವಾರ, ಜುಲೈ 11, 2015

ಸಿಹಿ ತಿನಿಸಿದವರ ಬಾಯಿಗೆ ಕಹಿ -

ಸುಮಾರು ೨ ತಿಂಗಳ ನಂತರ ಊರಿನ ನೆನಪಾಯಿತು, ಅದಕ್ಕೇ ದಿಡೀರನೆ ರೈಲಿನಲ್ಲಿ ತತ್ಕಾಲ ಟಿಕೆಟ್ ಪಡೆದು ಹೊರಟೆ.  ಬೆಳಗ್ಗೆ ೫ ಗಂಟೆಗೆ ಊರು ಮುಟ್ಟಿಸಿತು.
ನಮ್ಮ ಸಿದ್ರಾಮಯ್ಯನೋರು ಬಡವರ ಬಾಯಿಗೆ  ಅಕ್ಕಿ ಭಾಗ್ಯ ಕೊಟ್ಟ ಹಾಗೆ, ನಮ್ಮೂರಿಗೆ ವರುಣ  ಮಳೆ ಭಾಗ್ಯ ಕೊಟ್ಟಿದ್ದ. ಬರೋಣ ಬ್ಯಾಡವೋ ಅನ್ನೋ ತರ ಬರ್ತಿತ್ತು.

ಇಳಿದ ಕ್ಷಣ ಆಶ್ಚರ್ಯ, ೨ ತಿಂಗಳಲ್ಲಿ ಸಂಪೂರ್ಣ ಬದಲಾದ ಚಿತ್ರಣ.
ಹೊಸ ಪ್ಲಾಟ್ಫಾರ್ಮ್, ಹಳೇ ಹಂಚಿನ ಮನೆ ಇದ್ದ ರೈಲ್ವೆ ನಿಲ್ದಾಣದ ಕೌಂಟರ್, RCC ಕಟ್ಟಡವಾಗಿತ್ತು. ಬೆಳಕೇ ಇಲ್ಲದ ಪಾಳು ಬಿದ್ದ ಹಾಗೆ ಇದ್ದದ್ದು, ಜಗಮಗ ಅಂತ ಹೊಳೆಯುತ್ತಿತ್ತು. ಅಲ್ಲೇ ಇದ್ದ ಒಬ್ಬ ಮೋದಿ ಸರ್ಕಾರವನ್ನು ನೆನೆದು ಮಾತಾಡುತ್ತಾ ಹೋರಾಟ.

ಮನೆ ತಲುಪಿ, ಮತ್ತೆ ಮಲಗಿ ಎದ್ದು. ತಿಂಡಿಗೆ ತಯಾರಾದೆ. ಚಪಾತಿಗೆ ಬೆಲ್ಲ ಹಾಕಿ ಮಾಡಿದ ಮಾವಿನ ಸೀಕರಣೆ, ಗಸಗಸೆ ಪಾಯಸ ತಯಾರಾದದ್ದನ್ನು ನೋಡಿ, ಫುಲ್ ಕುಶ್. ಮಗ ಬಂದಾಗ ಹಬ್ಬ ಮಾಡು ಅನ್ನೋ ಮನಸ್ತಿತಿ ಈಗ ಸುಮಾರು ಮನೆಗಳಲ್ಲಿ ಬಂದಿದೆ.

ತಿಂಡಿ ತಿನ್ನುವಾಗ, ಟಿವಿ ಹಾಕಿ ಚಾನಲ್ ಬದಲಿಸುತ್ತಾ ಹೊರಟೆ. ಯಾವದೂ ಸಿಗದಿದ್ದಕ್ಕೆ ನ್ಯೂಸ್ ಹಾಕಿ ತಿನ್ನುತ್ತಾ ಕೂತೆ. ಮಂಡ್ಯ ರೈತರ ಆತ್ಮಹತ್ಯೆ ಬಗ್ಗೆ ಒಂದು ಕಾರ್ಯಕ್ರಮ ಬರ್ತಾ ಇತ್ತು.

ಕಬ್ಬು ಬೆಳೆದ ಕೆಲವು ರೈತರು, ಬೆಳೆದ ಕಬ್ಬು ತೆಗೆದುಕೊಂಡ ಕಾರ್ಖಾನೆಯವರು  ಹಣ ಕೊಡದದ್ದಕ್ಕೆ ಆತ್ಮಹತ್ಯೆ, ಮತ್ತೆ ಕೆಲವರು ಬೆಳೆ ಹಾನಿಯ ವಿಮೆ( Insurance ) ಬರದಿದ್ದಕ್ಕೆ ಆತ್ಮಹತ್ಯೆ.
ಇನ್ನೂ ಕೆಲವರು ಸಾಲ ಮಾಡಿ ಬೆಳೆದ ಕಬ್ಬನ್ನು ಕರೀದಿಸಲು ನಿರಾಕರಿಸುತ್ತಿರುವ ಕಾರ್ಖಾನೆ ನೋಡಿ ಅಸಹಾಯಕತೆ ಇಂದ ಆತ್ಮಹತ್ಯೆ. ಹೀಗೆ ಹಲವಾರು ಕಾರಣಕ್ಕೆ. ಒಟ್ಟಿನಲ್ಲಿ ಮನ ಕಲಕುವ ಕಾರ್ಯಕ್ರಮ.

ಹಾಗೆ ತಿನ್ನುತ್ತಿದ್ದ ಸಿಹಿ ಕಡೆ ಗಮನ ಹರಿಯಿತು. ಪ್ರತಿಯೊಬ್ಬರೂ ತಿನ್ನಲು ಸಿಹಿ ಒದಗಿಸಿದ ರೈತನಿಗೆ ಸಿಕ್ಕಿದ್ದು ವಿಷ. ತಿನ್ನಲು ಮುಜುಗರ ಅನಿಸಿತು. ಮತ್ತದೇ, ಆಷಾಡ ಮಾಸದಲ್ಲೂ ಸಿಹಿ ತಿನ್ನುವಂತೆ ಮಾಡಿದ ರೈತನಿಗೆ ನೇಣಿನ ಕುಣಿಕೆ.
ಆಶ್ಚರ್ಯದ ಸಂಗತಿ ಏನು ಅಂದರೆ, ಇಸ್ಟೆಲ್ಲಾ ಆದರೂ, ಇದೇ ಜಾಗಕ್ಕೆ ಸೇರಿದ ಮಾನ್ಯ ಸಿದ್ದರಾಮಯ್ಯ ನೋರು ಗಾಢ ನಿದ್ದೆಯಲ್ಲಿರುವುದು, ಮಂಡ್ಯದ ಗಂಡು ಅಂತ ಪದೇ ಪದೇ ಗಂಡು ಗಂಡು ಅಂತ ಹೇಳ್ತಿರೋರು ಎಲ್ಲಿ ಹೋದ್ರು.
ಒಂದು ದಿನ ಸoಬಳ ಬರೋದು ತಡವಾದರೆ ಅಥವಾ ಮಾರ್ಚ್ ನಲ್ಲಿ ಬಾರೋ ಬೋನಸ್ ಏಪ್ರಿಲ್ ನಲ್ಲಿ ಬಂದರೇ ಹಾರಾಡುವ ಹಕ್ಕು ನಮಗಿದೆ ಎಂದಾದರೆ, ರೈತರಿಗೆ ಯಾಕಿಲ್ಲ ಈ ಸವಲತ್ತು, ಅವರೇಕೆ ಮಾರಿದ ಹಣಕ್ಕ ವರ್ಷಗಟ್ಟಲೆ ಕಾಯಬೇಕು.
ಅವನೇಕೆ ಬೇರೆಯವರಿಗೆ ಸಿಹಿ ತಿನ್ನಿಸಿ ತಾನು ವಿಷ ಕುಡಿಯಬೇಕು.

ಸಿಹಿ ತಿನ್ನುವಾಗ ಒಮ್ಮೆ ಬೆಳೆದ ರೈತನನ್ನು ನೆನೆಸಿಕೊಳ್ಳಿ ಮಾನ್ಯ ಮಂತ್ರಿಗಳೇ, ನೀವು ತಿನ್ನುವ ಪದಾರ್ಥ ಕ್ರೌರ್ಯ ಅನಿಸಲಿಲ್ಲ ಎಂದಾದರೆ ಮನುಷ್ಯತ್ವ ಸತ್ತಿದೆ ಎಂದರ್ಥ. ದಯವಿಟ್ಟು ಎಲ್ಲರೂ ಮಾಡುವಂತೆ ಚಾನೆಲ್ ಬದಲಿಸಿ ತಿನ್ನಬೇಡಿ.

ಇದೆಲ್ಲವನ್ನೂ ನೋಡಿ, ನೋಡಿ ಸಾಕಾಗಿ ಬೆಳೆಯುವುದನ್ನು ನಿಲ್ಲಿಸಿ, ಪಟ್ಟಣಕ್ಕೆ ಒಲಸೆ ಹೋಗೋ ಮುಂದಿನ ಪೀಳಿಗೆ ಸೃಷ್ಟಿಯಾಗುತ್ತಿದೆ. ಆ ಕರಾಳ ದಿನ ಬರದಂತೆ ಎಚ್ಚರ ವಹಿಸದಿದ್ದಲ್ಲಿ ನಮ್ಮ ನಾಶಕ್ಕೆ ನಾವೇ ತಯಾರಾದಂತೆ.

-ಹರೀಶ್

ಭಾನುವಾರ, ಫೆಬ್ರವರಿ 1, 2015

ದೃಷ್ಟಿಕೋನ(ಣ) -

ಡಿಸೆoಬರ್ ತಿಂಗಳ ಕೊನೆ ಎಂದರೆ ಸಾಫ್ಟ್ವೇರ್ ಉದ್ಯೋಗಿಗಳಿಗೆ ಒಂದು ತರಹದ ಸಂತೋಷ, ಹೆಚ್ಚು ಕೆಲಸವಿಲ್ಲ ಅದರ ಮೇಲೆ ರಜೆಗಳು ಹಾಕುವ ಯೋಗ.
ಕ್ರಿಸ್ಮಸ್ ಎಂದರೆ ಏನೆಂದೂ ತಿಳಿಯದವರೆಲ್ಲ ಸಂಭ್ರಮಾಚರಣೆ ಮಾಡುವುದು, ಹೊಸ ವರ್ಷದ ಬರುವಿಕೆಗೆ ಕಾಯುವುದು, ಇಡೀ ಕಂಪನಿಯನ್ನು ಬಾಡದ ಹೂಗಳಿಂದ ಅಲಂಕರಿಸುವುದು,
ಅಶೋಕ ಮರಗಳ ತರಹದ ಗಾಳಿಬೀಸದ ಮರಗಳಿಗೆ ಅಲಂಕಾರ ಮಾಡಿ ಫೋಟೋ ತೆಗಿಸಿಕೊಂಡು, ಇನ್ನೂ ಹುಟ್ಟಲು ಸಮಯವಿರುವ ಶಿಶುವನ್ನು ಸಿಜರಿಯನ್ ಮಾಡಿ ತೆಗೆದು, ಹ್ಯಾಪಿ ಕ್ರಿಸ್ಮಸ್ ಹೇಳಿ ಪಾರ್ಟಿ ಮಾಡುವುದು.

ಮೇಲಿನ ಯಾವ ಆಚರಣೆಯನ್ನೂ, ಹಿಂದೆoದೂ ನೋಡಿ ಮಾಡಿ ಅಭ್ಯಾಸವಿಲ್ಲದ ನನಗೆ ಏನೋ ಹೊಸ ಅನುಭವ. ಎಷ್ಟೋ ಜಯಂತಿಗಳನ್ನು ಮಾಡುವ ನಾವು, ಇದೂ ಒಂದುತರ ಕ್ರಿಸ್ತ ಜಯಂತಿ ಅಂತ ಆಚರಣೆ ಮಾಡಿ ಮಜ ಮಾಡಿದೆವು.

ಹೀಗೆ  ನಾನು ಕೂಡ ಕ್ರಿಸ್ತ ಹುಟ್ಟುವ ೬ ದಿನ ಮುಂಚೆಯೇ ಎಲ್ಲ ಆಚರಣೆ ಮುಗಿಸಿ ಒಂದು ವಾರ ರಜೆ ಹಾಕಿ ಊರಿಗೆ ಹೊರಟೆ.
ಬೆಳಗ್ಗೆ ೫ ಗಂಟೆಗೆ ಊರು ತಲುಪಿದೆ, ಕೊರೆಯುವ ಚಳಿ, ನಿಶ್ಶಬ್ದವಾಗಿದ್ದ ತೋಟ, ಹಬ್ಬಕ್ಕೆ ಬಾ ಎಂದರೆ ಬರದೆ, ಹಬ್ಬಗಳೇ ಇಲ್ಲದ ಪುಷ್ಯಮಾಸದಲ್ಲಿ ವಾರಗಟ್ಟಲೆ ಬರುತ್ತಿರುವ ನನ್ನನ್ನು ನೋಡಿ ನಗುತ್ತಿರುವಂತೆ ಅನಿಸಿತು,
ಮಗ ಬಂದಾಗ ಹಬ್ಬ ಮಾಡುವ ಎನ್ನೋ ಮನಸ್ತಿತಿ ರೂಡಿ ಮಾಡಿಕೊಂಡಿದ್ದಾರೆ ಅಂತ ಅನ್ನಿಸಿ ಮನೆ ಕಡೆ ಹೊರಟೆ, ಹಾಗಂತ ಕ್ರಿಸ್ಮಸ್ ಮಾಡ್ತೀವಿ ಅಂತ ಅಲ್ಲ!

ಮನೆಯಲ್ಲಿ ಎರಡು ದಿನ ಕಳೆದು, ಅಜ್ಜಿ ಊರಿಗೆ ಹೋಗೋಣ ಅಂತ ಅನಿಸಿ, ಚಿಕ್ಕಮಗಳೂರಿನ ಬಳಿಯಿರುವ ಸಖರಾಯಪಟ್ಟಣಕ್ಕೆ ಹೊರಟೆ.
ಹೊಳಲ್ಕೆರೆಯಿಂದ ಸಖರಾಯಪಟ್ಟನಕ್ಕೆ ಕಡೂರು ಮಾರ್ಗವಾಗಿ ರೈಲಿನಲ್ಲಿ ಹೋಗುವುದು ಎಂದು ನಿಶ್ಚಯಿಸಿ,
ಎಲ್ಲ ತಯಾರಿ ಮಾಡಿಕೊಂಡು, ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪಿ, ರೈಲಿನಲ್ಲಿ ಕುಳಿತೆ.
ಅದು ಯಾಕೋ ಗೊತ್ತಿಲ್ಲ, ರೈಲಿನಲ್ಲಿ ನಾನು ಹತ್ತಿದ ಬೋಗಿಯಲ್ಲಿ ಜಾಸ್ತಿ ಜನ ಇರಲಿಲ್ಲ.

ಒಬ್ಬ ವಯಸ್ಸಾದ ಮದುಕ ಹೊಸದುರ್ಗದಲ್ಲಿ ಹತ್ತಿದ, ಕೈಯಲ್ಲಿ ಒಂದು, ಕೊಂಕಳಲ್ಲಿ ಮತ್ತೊಂದು ಅಂತ ಎರಡು ಬ್ಯಾಗ್ ಹಿಡಿದಿದ್ದಾನೆ,
ಪ್ಯಾoಟು ಷರಟು ಧರಿಸಿದ್ದಾನೆ, ನೀಟಾಗಿ, ಇರುವ ಕೂದಲಿಗೆ ಎಣ್ಣೆ ಹಚ್ಚಿ, ಚೊಕ್ಕವಾಗಿ ಬಾಚಿದ್ದಾನೆ, ಒಟ್ಟಿನಲ್ಲಿ, ದೇಹಕ್ಕೆ ವಯಸ್ಸಾಗಿದ್ದರೂ ಜೀವನೋತ್ಸಾಹ ಬತ್ತಿಲ್ಲ ಅನ್ನುವ ತರಹ ತೋರುತ್ತಿದ್ದ ಅವರು, ನೇರವಾಗಿ ಬಂದು ನನ್ನ ಎದುರು ಸೀಟಿನಲ್ಲಿ ಕುಳಿತರು.

ನಾನು ಅಷ್ಟೇನು ಗಮನಿಸದೆ ನನ್ನ ಪಾಡಿಗೆ ಒಂದು ಕಾದಂಬರಿ ಹಿಡಿದು ಕುಳಿತಿದ್ದೆ.
ಆತ ಆಕಡೆ ಈಕಡೆ ನೋಡಿ ಒಂದು ತರಹ ಭಯದಿಂದ, ನನ್ನನ್ನು ಮಾತನಾಡಿಸಬೇಕೆಂದು, ಸರ್ ಅಂದರು.
ನಾನು ಕತ್ತೆತ್ತಿ ಏನು ಎಂದೆ.
ಇದು ಅರಸಿಕೆರೆಗೆ ಹೋಗತ್ತದೆ ಅಲ್ವ ಅಂದರು.
ಹಾ ಹೋಗುತ್ತದೆ.
ಯಾಕೋ ರೈಲಿನಲ್ಲಿ ಜನ ತುಂಬಾ ಕಡಿಮೆ ಇದಾರಲ್ವ ಎಂದರು.
ಒಳ್ಳೆಯದಾಯಿತು ಬಿಡಿ ಯಜಮಾನರೆ, ನಿಮ್ಮ ವೃದ್ದಾಪ್ಯದ ಹಕ್ಕು ಚಲಾಯಿಸದೆ ಸೀಟು ಸಿಕ್ತಲ ಎಂದೆ.
ಅದಕ್ಕೆ ನಕ್ಕು, ಅಲ್ಲ ಸರ್ ಇಷ್ಟು ಕಮ್ಮಿ ಜನ ಇದ್ದಾರೆ.. ಭಯ.. ಅಷ್ಟೆ ಎಂದು ಅನುಮಾನದ ರೀತಿಯಲ್ಲಿ ಉತ್ತರಿಸಿದರು.
ಏನು ಆಗಲ್ಲ ಸರ್, ಮುಂದೆ ಕಡೂರು ಬಳಿ ಹತ್ತುತಾರೆ. ಯಾಕೆ ಭಯ ಅಂತೀರ, ಆರಾಮಾಗಿ ಕೂಡಿ ಅಂತ ಏನೋ ದೊಡ್ಡ ಧೈರ್ಯ ಹೇಳುವವನಂತೆ ಹೇಳಿ ಹಾಗೇ ಹಿಡಿದಿದ್ದ ಪುಸ್ತಕದ ಕಡೆಗೆ ಹೊರಳಿದೆ.

ಹಾಗೇ ಮನಸ್ಸಿನಲ್ಲಿ ಆಲೋಚನೆಯ ಪದರ ತೆರೆಯಿತು, ಯಾಕೆ ಈ ವ್ಯಕ್ತಿಗೆ ಭಯ? ದುಡ್ಡಿಲ್ಲದವರಿಗೆ ಜೀವನದಲ್ಲಿ ಭಯ ಅಂತ ಕೇಲಿದ್ದೆ, ಆದರೆ ಈತ ನೋಡಲಿಕ್ಕೆ ಶ್ರೀಮಂತನ ತರಹ ಕಾಣುತ್ತಾನೆ, ಸಾಕಷ್ಟು ಹಣ ಇದೆ ಅನ್ಸತ್ತೆ. ಆದರೂ ಯಾಕೆ ಭಯ?
ವಯಸ್ಸಿದ್ದಾಗ ದುಡಿದಿದ್ದನ್ನು ಕಾಯುವ ಶಕ್ತಿ ಇಲ್ಲದ್ದಕ್ಕೆ ಭಯವೇ? ಅಥವಾ ವಯಸ್ಸಾದರೂ ಹಣದ ವ್ಯಾಮೋಹ ಬತ್ತದ್ದಕ್ಕೆ ಭಯವೇ? ಕುತೂಹಲದ ಕಟ್ಟೆ ಒಡೆದು, ಸರ್ ಯಾಕೆ ಭಯ ಎಂದೆ?
ಏನಿಲ್ಲ ಸರ್, ಜನ ಇಲ್ಲವಲ್ಲ, ಯಾರಾದ್ರು ಬಂದು ಬೆದರಿಸಿ ಲಗೇಜು ಕದ್ದಾರು ಅಂತ ಅಷ್ಟೆ.
ಒಹ್ ಹಾಗಾ ಏನು ಭಯ ಬೇಡಿ ಮುಂದೆ ಜನ ಹತ್ತುತಾರೆ ಎಂದೆ, ಸರಿ ಏನು ಅರಸೀಕೆರೆಗೆ ಹೋಗ್ತಾಯಿರೋದು ಎಂದೆ.
ಏನಿಲ್ಲ ಅಲ್ಲಿ ಮಗನ ಮನೆಗೆ ಹೋಗ್ತಿದ್ದೀನಿ ಎಂದರು. ಹಾಗೇ ಮಾತು ಮುಂದುವರೆದು ನನ್ನ ಪರಿಚಯವೂ ಆದಮೇಲೆ,
ಆತ ತನ್ನ ಜೀವನ ವೃತ್ತಾಂತ ಶುರು ಮಾಡಿದ. ಮಗನಿಗೆ ಮನೆ ಕಟ್ಟಿಸುತ್ತಿದ್ದಾರಂತೆ, ಮಗಳಿಗೆ ಒಂದು ಸೈಟ್ ತೆಗೆದು ಕೊಂಡಿದ್ದಾರಂತೆ ಅಲ್ಲೂ ಮನೆ ಕಟ್ಟಿಸಬೇಕಂತೆ.., ಕೊನೆಗೆ ಹೇಳಿದ, ಆತ PWD ಲಿ ಸೇ(ಶೇ)ವೆ ಸಲ್ಲಿಸಿದ್ದೀನಿ ಅಂತ.

ಇಷ್ಟು ವಯಸ್ಸಿನಲ್ಲೂ ಇಷ್ಟು ಆಸೆ ಹೊತ್ತ ಆ ವ್ಯಕ್ತಿ ನೋಡಿ.

ಅಂಗಗಳೆಲ್ಲವು ಶಕ್ತಿ ವಿಹೀನವು,
ಒಂದೂ ಹಲ್ಲೂ ಬಾಯೋಳಗಿಲ್ಲ,
ದಂಡದ ಬಲದಿ ನಡೆಯುವ ವೃದ್ಧನು,
ಆಶಾ ಪಿಂಡವ ಬಿಡಲಾರ. ಅಂತ ಯಾವಾಗಲೋ ಓದಿದ್ದು ಮನಸ್ಸಿಗೆ ಬಂದು ನಗು ಬಂತು.

ಇದೇನು ಜೀವನೋತ್ಸಾಹವೋ? ಅಥವಾ ಆಸೆಯೋ? ಅಥವಾ ಮಕ್ಕಳ ಮೇಲಿನ ಅತೀ ವ್ಯಾಮೋಹವೋ? ತಿಳಿಯಲಿಲ್ಲ.

ಹಾಗೆ ಮಾತನಾಡುತ್ತಾ ಮಾತನಾಡುತ್ತಾ ಬೀರೂರು ಸಿಕ್ಕಿತು, ಅಲ್ಲಿ ನಮ್ಮ ಬೋಗಿಗೆ ತುಂಬಾ ಜನ ಹತ್ತಿದರು, ಆಗ ಓ ತುಂಬ ಜನ ಬಂದರಲ್ಲ, ಮುದುಕನಿಗೆ ಧೈರ್ಯ ಬಂದಿರಬೇಕೆಂದು ಆತನನ್ನು ಕೇಳಿದೆ,
ಏನ್ ಸರ್, ನೋಡಿ ತುಂಬಾ ಜನ, ಈಗಲಾದರೂ ಆರಾಮಾಗಿ ಕೂತ್ಕೊಳಿ ಎಂದೆ.
ಆತ ಭಯದ ರೀತಿಯಲ್ಲಿ, ಹೆ ಏನಪ್ಪ!, ಇಷ್ಟೊಂದು ಜನ ಹತ್ತಿದರು, ಈ ನೂಕು ನುಗ್ಗಲಲ್ಲಿ ಯಾರಾದರು ಗೊತ್ತಾಗದಂತೆ ಲಪಟಾಯಿಸಿ ಬಿಟ್ಟರೆ ಎಂದರು.

ದೇವರೇ ನೀನೇ ಇವರನ್ನು ಕಾಪಾಡಬೇಕು ಅಂತ ಅನಿಸಿ,  ಏನು ಭಯ ಬೇಡ ಸರ್, ಆರಾಮಾಗಿ ಕೂತ್ಕೊಳಿ ನನ್ನ ಸ್ಟಾಪ್ ಬಂತು ನಾನು ಇಳೀತೀನಿ ಅಂತ ಕಡೂರು ರೈಲ್ವೆ ನಿಲ್ದಾಣದಲ್ಲಿ ಇಳಿದೆ.

ಈತ ಎಲ್ಲಾ ದೃಷ್ಟಿಕೋನದಿಂದಲೂ ಜನರನ್ನ ಕಳ್ಳರoತೆಯೇ ನೋಡುತ್ತಾನಲ್ಲ ಅಂತ ಅನಿಸಿ ಅವನ ಪರಿಸ್ಥಿತಿ ನೆನೆದು ನಗು ಬಂತು.
ಪಾಪ, ಜಗತ್ತನ್ನು ತನ್ನoತೆಯೇ ಕಾಣು ಎನ್ನುವುದನ್ನು ದೃಢವಾಗಿ ನಂಬಿದಂತಿದೆ ಮುದುಕ!!!


-ಹರೀಶ್


 

ಭಾನುವಾರ, ಅಕ್ಟೋಬರ್ 26, 2014

ಚಲನೆಯೇ ಚೇತನದ ಚಿಹ್ನೆ-


ಇಂದು ಭಾನುವಾರ, ಬೆಂಗಳೂರಿಗರಿಗೆ ಮಳೆಯಿಂದ ಅಕ್ಷರಷಃ ಭಾನು ಇಲ್ಲದ ವಾರ. ಇಂತಹ ಸುಮದುರ ಸಮಯದಲ್ಲಿ ಹಾಗೇ ಕುವೆಂಪು ಬರೆದ ಒಂದು ಪುಸ್ತಕ ಹಿಡಿದಿದ್ದೆ. ಓದುತ್ತಾ ಓದುತ್ತಾ ಕೆಲವು ಸಾಲುಗಳು ತುಂಬಾ ಇಷ್ಟವಾದವು.

"ಹೇಳಿದೊಡನೆ ನಂಬಬಹುದಾದದ್ದು ಶ್ರುತಿ, ಹೇಳಿದ್ದು ಸಕಾರಣವಾಗಿದ್ದರೆ ಮಾತ್ರ ನಂಬುವುದು ಮತಿ, ಹೇಳಿದ್ದನ್ನು ಸ್ವಂತ ಅನುಭವಕ್ಕೆ ತಂದುಕೊಂಡ ಮೇಲೆ ನಂಬುವುದು ಅನುಭೂತಿ."

ಮತ್ತೆ ಮತ್ತೆ ಕುತೂಹಲ ಕೆರಳಿಸಿ ಓದಿಸಿದ ಸಾಲುಗಳು.

ಸಂಜೆತನಕ ಓದಿ, ಸ್ವಲ್ಪ ಸಮಯ ಹೊರಗೆ ಹೋಗೋಣವೆಂದೆನಿಸಿ, ಪುಸ್ತಕ ಮುಚ್ಚಿಟ್ಟು, ಓದಿದ್ದನ್ನು ಮೆಲುಕು ಹಾಕುತ್ತಾ ಒಂದು ದೇವಸ್ಥಾನದೆಡೆಗೆ ನಡೆದೆ.
ಅದು ಗಿರಿನಗರದಲ್ಲಿರುವ ಆoಜನೇಯನ ಗುಡಿ. ದೇವಸ್ಥಾನದ ಒಳಗಡೆ ನಡೆದೆ. ಹಾಗೇ ಒಂದು ನಿಮಿಷ ನಿಂತಾಕ್ಷಣ ತಲೆ ತಿರುಗಿತು.
ಅಬ್ಬಾ! ಅದೆಷ್ಟು ಜನ, ಎಲ್ಲರೂ ಓಟಕ್ಕೆ ಬಿಟ್ಟವರಂತೆ ತಮ್ಮ ಶಕ್ತಿಮೀರಿದಷ್ಟು ಜೋರಾಗಿ ಹನುಮಪ್ಪನನ್ನು ಸುತ್ತುತ್ತಿದ್ದಾರೆ, ಒಬ್ಬರನ್ನು ಒಬ್ಬರು ತಳ್ಳುತ್ತಾ, ಮುಂದಿನವನು ಸ್ವಲ್ಪ ನಿಧಾನವಾದರೆ ಅವನನ್ನು ಹಿಂದಿಕ್ಕಲು ಮುಂದೆ ಸಾಗುತ್ತಾ ಗಿರ ಗಿರನೆ ತಿರುಗುತ್ತಿದ್ದಾರೆ.
ಕೆಲವರು ತಮ್ಮ ಅಭೀಷ್ಟ ಸಿದ್ಧಿಗಾಗಿ ತೆಂಗಿನಕಾಯಿ ಕಟ್ಟುತ್ತಿದ್ದಾರೆ, ಮತ್ತೆ ಕೆಲವರು ಕೈ ಮುಗಿದು ಭಗವಂತನನ್ನು ಕಾಯುತ್ತಿರುವರೇನೋ ಎನ್ನುವಂತೆ ಓಟಕ್ಕೆ ತಯಾರಾಗಿ ಅರ್ಚಕನ ಸಿಗ್ನಲ್ಗೆ ಕಾಯುತ್ತಾ ಕುಳಿತಿದ್ದಾರೆ.
ರೈಲ್ವೇ ನಿಲ್ದಾಣದಂತೆ ತೋರುತ್ತಿದ್ದ ಆ ಜಾಗದಲ್ಲಿ ಓಡುತ್ತಿದ್ದ ಒಬ್ಬ ಮಹಾಶಯನನ್ನು ನಿಲ್ಲಿಸಿ, ಯಾಕಪ್ಪಾ ರಾಜ ಈತರ ಓಡ್ತಾ ಇದ್ದೀಯ ಎಂದೆ. ಅದಕ್ಕೆ ಅವನು, ಅಯ್ನೋರು 41 ಸುತ್ತು ಹೊಡಿಯಾಕ್ ಹೇಳಿದರೆ ಅದೇನ್
ಬೇಗ ಮುಗಿಯುತ್ತಾ, ಮುಗೀದಲೆ ಹೋಗಂಗಿಲ್ಲ ಅದಕ್ಕೇ ಅಂದ.

ಸರಿ ನೀನಿನ್ನು ಓಡಪ್ಪಾ ಅಂತ ಹೇಳಿ, signal light ಇಲ್ಲದ traffic ನಲ್ಲಿ ರಸ್ತೆ ದಾಟುವ ಪರದಾಟದ ಪಾದಾಚಾರಿಯಂತೆ ನುಗ್ಗಿ, ಹನುಮಪ್ಪನ ಮುಂದೆ ನಿಂತೆ.
ನೋಡಿದಾಕ್ಷಣ ಕಣ್ಣು ತುಂಬುವಂತಹ ಕೈ ಮುಗಿದು ರಾಮನನ್ನು ನೆನೆಯುತ್ತಿರುವ ಪುಟ್ಟ ಮೂರ್ತಿಯನ್ನು
ಅರ್ಚಕರು ನಿಂಬೆಹಣ್ಣಿನ ಹಾರ ಹಾಕಿ, ತಿರುಗ್ಬೇಡ್ರೋ ತಲೆ ಸುತ್ತುತಾ ಇದೆ ಅಂತ ಕೈ ಮುಗಿದು ಕಣ್ಣು ಮುಚ್ಚಿರುವಂತೆ ಮಾಡಿದ್ದಾರೆ.

ಯಾಕೀಗತಿ ನಿನಗೆ ಎಂದು ಅನಿಸಿ ಒಂದು ನಮಸ್ಕಾರ ಮಾಡಿ ಹೊರಟೆ. ಬರುವಾಗ ಅನಿಸಿತು.

ಪೂಜಾರಿಯ 41 ಪ್ರದಕ್ಷಿಣೆಯನ್ನು ಶ್ರುತಿ ಎಂದು ನಂಬಿ, ತಮ್ಮ ಆಸೆಗೋಸ್ಕರ ಅದನ್ನು ಮತಿಯಾಗಿಸಿಕೊಂಡು. ಅನುಭೂತಿಯಾಗಲಿ ಎಂದು ಬಯಸುತ್ತಾರಾ ಜನ?

-ಹರೀಶ್

ಶನಿವಾರ, ಅಕ್ಟೋಬರ್ 18, 2014

ಸoಭಾಷಣೆ

ತಂದೆ ಮಗಳ ಸಂಭಾಷಣೆಯ ಒಂದು ತುಣಕು.

ತಂದೆ    : ಮಗು, ನಿನಗೆ ಎಂತಹ ಗಂಡನ್ನು ಹುಡುಕಲಿ.

ಜಾಹ್ನವಿ : ಯಾಕಪ್ಪ? ಇದ್ದಕ್ಕಿದ್ದಹಾಗೆ ಈ ಮಾತು.

ತಂದೆ    : ಹಾಗೆ ಒಂದು ತೀಕ್ಷ್ಣ ಚರ್ಚೆ ಮಾಡೋಣ ಅಂತ ಮನಸ್ಸಾಗಿದೆ. ನಿನ್ನ ಮಾತುಗಾರಿಕೆಯ ಮಜಲನ್ನು ನೋಡೂ ಆಸೆ.

ಜಾಹ್ನವಿ : ಹಾಗೋ! ಸರಿ ಅಣ್ಣ, ಹಾಗೆ ಆಗಲಿ, ನಾನು ವಿಷಯೋಚಿತವಾಗಿ ಮಾತನಾಡಿ ಬಹಳ ದಿನವಾಗಿದೆ.

ತಂದೆ    : ಮಗು ಒಂದು ಹೆಣ್ಣಿಗೆ ತನ್ನ ಗಂಡ ಸೂರ್ಯನಂತಿರಬೇಕೆoದು ಆಸೆ ಇರುತ್ತೋ ಅಥವಾ ಚಂದ್ರನಂತಿರಬೇಕೆoದೊ?

ಜಾಹ್ನವಿ : ಮೇಲ್ನೋಟಕ್ಕೆ ಸುಲಬದ ಪ್ರಶ್ನೆಯಾದರೂ ಅರ್ಥಗರ್ಭಿತವಾಗಿದೆ. ತಟ್ಟನೆ ಉತ್ತರಿಸಬೇಕೆಂದರೆ, ಸಾಮಾನ್ಯ ಒಂದು               ಹೆಣ್ಣು, ನನ್ನ ಗಂಡ  ತoಪಾದ ಮನಸ್ಸುಳ್ಳವನು, ಶಾoತ ಮೂರ್ತಿಯಾದ ಚಂದ್ರನಂತವನಾಗಿರಬೇಕು ಎಂದೇ         ಹೇಳುತ್ತಾಳೆ. ಆದರೆ ಚಂದ್ರ ಪರಾವಲಂಬಿ, ಬೇರೆಯರನ್ನು ಅವಲಂಬಿಸಿ ಬದುಕುತ್ತಿರುವ ಗಂಡನ್ನು ಯಾವ ಧೈರ್ಯದ ಮೇಲೆ   ಹೆಣ್ಣು ಮದುವೆಯಾದಾಳು? ಅದರ ಮೇಲೆ ಅವನು ಕಲೆಯುಳ್ಳ ಕುರೂಪಿ. ದಿನದಿನಕ್ಕೂ ಯಶಸ್ಸನ್ನು ಕಂಡು ಶುಕ್ಲಪಕ್ಷದ ತುದಿಯನ್ನು ಮುಟ್ಟಿರುವ ಗಂಡನ್ನು ಮದುವೆಯಾಗಿ ಆಮೇಲೆ ಕೃಷ್ಣ ಪಕ್ಷದಲ್ಲಿ ಜೀವನ ಸಾಗಿಸೋ ಕರ್ಮ ಹೆಣ್ಣಿಗೆ ಬಂದರೆ? ಅದರಲ್ಲೂ ರಾತ್ರಿಪಾಳೆ ಮಾಡೋ ಗಂಡು ಹೆಣ್ಣಿಗೆ ಎಷ್ಟು ಸಮಂಜಸ...
   
ತಂದೆ  : ಹಾಗಾದರೆ ಚಂದ್ರನನ್ನು ಇಷ್ಟು ಜರೆಯುವ ಹೆಣ್ಣು ಜಗತ್ಪ್ರಸಿಧ್ಧನಾದ, ಸ್ವಾವಲಂಭಿಯಾದ, ಸದಾ ಜಗಕ್ಕೋಸ್ಕರ ಸವೆಯುತ್ತಿರುವ ಸೂರ್ಯನಂತವನು ಇಷ್ಟವಾದಾನೆ?

ಜಾಹ್ನವಿ : ಖಂಡಿತಾ ಇಲ್ಲ. ಸದಾ ಜನರ ಸೇವೆಯಲ್ಲಿರುವ ಗಂಡು ಹೆಂಡತಿಗೆಲ್ಲಿ ಸಮಯ ಕೊಟ್ಟಾನು? ಸದಾ ಬೇರೆಯಾವರಿಗೋಸ್ಕರ ತನ್ನ ಒಡಲನ್ನು  ಬೆಂಕಿಯ ಉಂಡೆಯನ್ನಾಗಿಸಿಕೊoಡು ಪ್ರಕಾಶಮಾನವಾಗಿ ಧಗ ಧಗನೆ ಉರಿಯುತ್ತಿರುವವನ ಒಡಲಲ್ಲಿ ಹೆಣ್ಣಿನ ಅಸ್ತಿತ್ವಕ್ಕೆ ಬೆಲೆ ಎಲ್ಲಿ.

ತಂದೆ    : ಸದಾ ಹೆಣ್ಣಿನ ಸುತ್ತಲೇ ಸುತ್ತರಿಯುವ ಚಂದ್ರನoತವನೂ ಬೇಡ, ಹೆಣ್ಣನ್ನೇ ತನ್ನ ಸುತ್ತ ಸುತ್ತುವoತೆ  ಆಕರ್ಷಿತನಾದ ಭಾಸ್ಕರನಂತವನೂ ಬೇಡ ಅಂದರೆ, ಚಕ್ರವರ್ಥಿಯಾದ ಗಂಡ ಬೇಕು ಆದರೆ ಮನೆಯಲ್ಲಿರಬೇಕು ಅನ್ನೋ ಆಗದ ವಾದವೇ ನಿನ್ನದು?

ಜಾಹ್ನವಿ : ಹೆಣ್ಣು ಯಾವಾಗಲೂ ಸೂರ್ಯನಂತಹ...

ಅಮ್ಮ : ಎoತದು ಕಾಡು ಹರಟೆ ಅಪ್ಪ ಮಗಳದು, ಊಟಕ್ಕೆ ಬನ್ನಿ ಹೊತ್ತಾಯ್ತು.

ತಂದೆ : ಸರಿ ನಡಿ ಊಟ ಮಾಡೋಣ, ನಿನ್ನ ಮಾದುವೆಗೆ ಇನ್ನೂ ಸಮಯ ಇದೆ, ಆಗ ಯಾವ್ದಾದ್ರು ಗುರು ಗ್ರಹದ ಗಂಡು ಹುಡ್ಕೋಣ.



-ಹರೀಶ್